Headlines

ಹುಂಚ ಗ್ರಾಪಂ ಅಧ್ಯಕ್ಷೆ ಹುದ್ದೆಗಾಗಿ ಆಂತರಿಕ ಕಿತ್ತಾಟ – ನಿ… ಕೊಡೆ , ನಾ..ಬಿಡೆ

ಹುಂಚ ಗ್ರಾಪಂ ಅಧ್ಯಕ್ಷೆ ಹುದ್ದೆಗಾಗಿ ಆಂತರಿಕ ಕಿತ್ತಾಟ – ನಿ… ಕೊಡೆ , ನಾ..ಬಿಡೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಂತರಿಕ ಕಿತ್ತಾಟ ಹೆಚ್ಚಾಗಿದ್ದು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೌದು ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ ಒಡಂಬಡಿಕೆಯಂತೆ ಅವಧಿಯ ನಂತರ ಸ್ಥಾನವನ್ನು ಬಿಟ್ಟುಕೊಡದೇ ಪಟ್ಟು ಹಿಡಿದು ಕುಳಿತಿದ್ದಾರೆ ಎಂದು ಕೆಲವು ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಆರೋಪಿಸುತ್ತಿದ್ದರೆ, ತಾನು ರಾಜೀನಾಮೆ ನೀಡಿದರೆ ಮುಂದೆ ಕಾಂಗ್ರೆಸ್ ಬೋರ್ಡ್ ರಚಿಸಲು ಕಷ್ಟ ಸಾಧ್ಯವಾಗುವುದರಿಂದ ಪಕ್ಷದ ಮುಖಂಡರು ಹಾಗೂ ಕೆಲವು ಸದಸ್ಯರು ರಾಜೀನಾಮೆ ನೀಡದಂತೆ ಸೂಚನೆ ನೀಡಿದ್ದಾರೆ ಎಂದು ಹಾಲಿ ಅಧ್ಯಕ್ಷ ಸುಮಂಗಲ ದೇವರಾಜ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದಾರೆ.

ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವ ಸುಮಂಗಳಾ ದೇವರಾಜ್

ಗ್ರಾಮ ಪಂಚಾಯಿತಿ ಸದಸ್ಯೆ ಯಶಸ್ವತಿ ಜೈನ್ ಹಾಗೂ ಸುಮಂಗಲ ದೇವರಾಜ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಪ್ರಮುಖ ಮುಖಂಡರ ಸಮ್ಮುಖದಲ್ಲಿ ಒಡಂಬಡಿಕೆ ನಡೆದಿದ್ದು ಆ ಪ್ರಕಾರ ಅಧ್ಯಕ್ಷೆ ಸುಮಂಗಲ ದೇವರಾಜ್ ರಾಜೀನಾಮೆ ನೀಡಿದ್ದರು ಆನಂತರ ನಡೆದ ಕೆಲವು ರಾಜಕೀಯ ಬೆಳವಣಿಗೆಯಿಂದ ರಾಜೀನಾಮೆ ಹಿಂಪಡೆಯುವ ಮೂಲಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗುತ್ತಿದೆ.

ಅಧ್ಯಕ್ಷೆ ಸುಮಂಗಳ ದೇವರಾಜ್ ರವರ ಈ ನಡೆಯಿಂದ ಸ್ಥಳೀಯ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಈಗಾಗಲೇ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ ರವರಿಗೆ ಪತ್ರವನ್ನು ಬರೆದಿದ್ದು ಸದರಿ ಅಧ್ಯಕ್ಷರು ತಾಲೂಕ್ ಗ್ಯಾರಂಟಿ ಸಮಿತಿಯ ಸದಸ್ಯರಾಗಿದ್ದು ಅವರನ್ನು ಕಮಿಟಿಯಿಂದ ವಜಾ ಗೊಳಿಸುವಂತೆ ಹಾಗೂ ಪಕ್ಷದಿಂದ ಉಚ್ಚಾಟಿಸುವಂತೆ ಮನವಿ ಸಲ್ಲಿಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಗ್ರಾಪಂಗಳಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿದ್ದು, ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಲು ಕ್ರಿಮಿನಲ್‌ ಕೇಸ್‌ನ್ನು ಅಸ್ತ್ರವಾಗಿ ಬಳಸುವ ಪ್ರಕರಣ ದಿನೇ ದಿನೇ ಹೆಚ್ಚುತ್ತಿವೆ. ಅಧ್ಯಕ್ಷ ಸ್ಥಾನದ ಆಯ್ಕೆ ವೇಳೆ ರಚಿಸಿಕೊಳ್ಳುವ ಅಧಿಕಾರ ಹಂಚಿಕೆ ಸೂತ್ರ ಒಡಂಬಡಿಕೆ ಪಾಲಿಸದೆ ಮಾತಿಗೆ ತಪ್ಪಿದರೆ ಅಂತವರನ್ನು ಇಳಿಸಲು ಈ ಅಸ್ತ್ರ ಪ್ರಯೋಗ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ.

ಸುಮಂಗಲ ದೇವರಾಜ್ ಅವರು ಮಾಡಿಕೊಂಡಿರುವ ಒಡಂಬಡಿಕೆಯಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿರುವ ಬಗ್ಗೆಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.ಸುಮಂಗಲ ದೇವರಾಜ್ ಅವರು ರಾಜೀನಾಮೆ ನೀಡದಿರಲು ಕಾರಣವೇನು? ಅವರು ಒಡಂಬಡಿಕೆಯನ್ನು ಉಲ್ಲಂಘಿಸುತ್ತಿದ್ದಾರೆಯೇ ಅಥವಾ ಅವರ ನಿರ್ಧಾರಕ್ಕೆ ಬೇರೆ ಕಾರಣಗಳಿವೆಯೇ?ಗ್ರಾಮ ಪಂಚಾಯಿತಿಯ ಇತರ ಸದಸ್ಯರ ಪ್ರತಿಕ್ರಿಯೆ ಏನು?ಎಂಬುವುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

ಇನ್ನೂ ಈ ಆಂತರಿಕ ಕಿತ್ತಾಟ ಕಳೆದ ಮೂರು ನಾಲ್ಕು ತಿಂಗಳುಗಳಿಂದ ನಡೆಯುತಿದ್ದರೂ ಪಕ್ಷದ ಮುಖಂಡರು ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗದಿರುವುದು ವಿಪರ್ಯಾಸವೇ ಸರಿ…..

ರಾಜೀನಾಮೆ ಪತ್ರ…..
ಕರಾರು ಉಲ್ಲಂಘನೆ ವಿರುದ್ದ ಸ್ಥಳೀಯ ಮುಖಂಡರಿಂದ ದೂರು ಸಲ್ಲಿಕೆ..

Leave a Reply

Your email address will not be published. Required fields are marked *

Exit mobile version