Headlines

Viral News | ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ

ಬೆಂಗಳೂರು : ಪತಿಯೊಬ್ಬ ಹೆಂಡ್ತಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊತ್ತನೂರು ಭಾಗದ ಮಾರಮ್ಮ‌ ದೇಗುಲದ ಬಳಿ ವಾಸವಿದ್ದ ಪ್ರಭು ಜಂಗ್ಲಿ ಎಂಬಾತನೇ ಪತ್ನಿ ಪ್ರಿಯಾಂಕಾಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ.

ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಪ್ರಭುಗೆ ಪ್ರಿಯಾಂಕಾ ಮೇಲೆ ಅನುಮಾನ ಇತ್ತಂತೆ. ಪತ್ನಿ ಮೇಲೆ ಅನುಮಾನ ಪಟ್ಟು ಪದೇ ಪದೇ ಜಗಳ ಕೂಡ ಆಡುತ್ತಿದ್ದನಂತೆ. ಮೊನ್ನೆ ಸಂಜೆ ಕುಡಿಯ ಮತ್ತಿನಲ್ಲಿ ಪೆಟ್ರೋಲ್ ತಂದ ಪ್ರಭು ಪತ್ನಿ ಪ್ರಿಯಾಂಕ್ ಮೇಲೆ ಸುರಿದು ತಾನೂ ಸುರಿದುಕೊಂಡಿದ್ದ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಪತ್ನಿಗೂ ಬೆಂಕಿ ಹಾಕಿದ್ದ. ಆದ್ರೆ ಬೆಂಕಿ ಉರಿ ತಾಳಲಾರದೆ ಮನೆಯಿಂದ ಹೊರಗಡೆ ಓಡಿ ಬಂದಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಬಗ್ಗೆ ಪ್ರಿಯಾಂಕಾ ಸಂಬಂಧಿ ಅರುಣ್ ಪ್ರತಿಕ್ರಿಯಿಸಿದ್ದು, ಪ್ರಭು ಮೂಲತಃ ಬೆಳಗಾವಿಯವರು, ಪ್ರಿಯಾಂಕ ಬೆಂಗಳೂನವರಾಗಿದ್ದು, ಎರಡು ವರ್ಷಗಳ ಹಿಂದೆ ಪ್ರಭು, ಪ್ರಿಯಾಂಕ ಲವ್ ಮ್ಯಾರೇಜ್ ಆಗಿದ್ದರು. ಮದುವೆ ಆದಾಗಿನಿಂದಲೂ ಇಬ್ಬರೂ ಪ್ರತಿ ದಿನ ಜಗಳವಾಡುತ್ತಿದ್ದರು. ಪ್ರಭು ದಿನ ಕುಡಿದು ಪ್ರಿಯಾಂಕ ಮೇಲೆ ಹಲ್ಲೆ ಮಾಡುತ್ತಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲೂ ದೂರುಗಳು ದಾಖಲಾಗಿವೆ. ಪ್ರಭು ತನ್ನ ಅಕ್ಕಂದಿರ ಮಾತು ಕೇಳಿ ಪ್ರಿಯಾಂಕ‌ ಮೇಲೆ ಅನುಮಾನ ಪಡುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಸಂಸಾರ ಮುಂದುವರೆಸಿದ್ದರು, ಬುಧವಾರ ಸಂಜೆ ಮತ್ತೆ ಇಬ್ಬರೂ ಜಗಳ ಆಡಿದ್ದಾರೆ. ಮಾತಿಗೆ ಮಾತು ಬೆಳೆದು ಪ್ರಭು ಪ್ರಿಯಾಂಕ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದಿದ್ದಾರೆ.

ಸದ್ಯ ಇಬ್ಬರಿಗೂ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿ ಪತಿ ಪ್ರಭು ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

Exit mobile version