ಪರೀಕ್ಷೆ ಬರೆದು 5 ತಿಂಗಳಾದರು ಪ್ರಕಟಗೊಳ್ಳದ Bed ಫಲಿತಾಂಶ – ಆತಂಕದಲ್ಲಿ ಪ್ರಶಿಕ್ಷಣಾರ್ಥಿಗಳು
ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ 17 ಬಿ.ಇಡಿ ಕಾಲೇಜುಗಳ 911 ಪ್ರ-ಶಿಕ್ಷಣಾರ್ಥಿಗಳು 4ನೇ ಸೆಮಿಸ್ಟರ್ ಪರೀಕ್ಷೆಯನ್ನು ಬರೆದು 5 ತಿಂಗಳೇ ಕಳೆದಿದ್ದರೂ, ಇನ್ನೂ ಫಲಿತಾಂಶ ಬಾರದ ಕಾರಣ ಪರೀಕ್ಷಾರ್ಥಿಗಳ ಭವಿಷ್ಯ ಅತಂತ್ರಕ್ಕೀಡಾಗಿದೆ.
2022-23ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಅಂತಿಮ ಸೆಮಿಸ್ಟರ್ನ ಪರೀಕ್ಷೆಗಳು ಕಳೆದ ಜನವರಿ 10ರಂದು ಮುಕ್ತಾಯವಾಗಿದೆ.ಆದರೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಈ ಮಧ್ಯೆ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಕಳೆದ ಮೇ 30ರಂದು ಅರ್ಜಿ ಕರೆದಿದೆ. ಬಿ.ಇಡಿ ಮುಗಿಸಿದರೂ ಫಲಿತಾಂಶ ಬಾರದೇ, ಅಂಕಪಟ್ಟಿ ಸಿಗದೇ ಹುದ್ದೆಗೆ ಅರ್ಜಿ ಹಾಕಲು ಸಾಧ್ಯವಿಲ್ಲ. ಇನ್ನೊಂದೆಡೆ ಶೈಕ್ಷಣಿಕ ವರ್ಷ ಆರಂಭವಾಗಿದೆ. ‘ಖಾಸಗಿ ಶಾಲೆಗಳಲ್ಲಿ ನೇಮಕಾತಿಗೆ ಅರ್ಜಿ ಕರೆದರೂ ನಮಗೆ ಹಾಕಲು ಆಗುತ್ತಿಲ್ಲ. ಇದು ನನ್ನಂತೆಯೇ ನೌಕರಿ ನಿರೀಕ್ಷೆಯಲ್ಲಿರುವ ಎಲ್ಲರಿಗೂ ಆಗಿರುವ ತೊಂದರೆ’ ಎಂದು ಪ್ರಶಿಕ್ಷಣಾರ್ಥಿ ಶಿವಮೊಗ್ಗದ ಕೆ.ವಿ.ಲೇಖನ ಅಳಲು ತೋಡಿಕೊಳ್ಳುತ್ತಾರೆ.
ನೌಕರಿಗೆ ಅರ್ಜಿ ಹಾಕಲಷ್ಟೇ ಅಲ್ಲ, ಸ್ನಾತಕೋತ್ತರ (ಎಂ.ಇಡಿ) ಪದವಿ ಸೇರ್ಪಡೆ ಹಾಗೂ ಬಿ.ಇಡಿ ಕಾಲೇಜುಗಳಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ವಿಶ್ವವಿದ್ಯಾಲಯದಿಂದ ಸಂಯೋಜನೆ ನೀಡಲು ಫಲಿತಾಂಶ ಬಾರದಿರುವುದು ಅಡ್ಡಿಯಾಗಿದೆ. ಸಂಯೋಜನೆ ಸಿಗದೇ ಬಿ.ಇಡಿ ಕೋರ್ಸ್ಗೆ ಹೊಸದಾಗಿ ದಾಖಲಾತಿ ಪ್ರಕ್ರಿಯೆಯೂ ಸಾಧ್ಯವಾಗಿಲ್ಲ.
ಉನ್ನತ ಶಿಕ್ಷಣ ಇಲಾಖೆಯ ಯುಯುಸಿಎಂಎಸ್ (University Unified collegiate administration system) ವ್ಯವಸ್ಥೆಯಡಿ ವಿಶ್ವವಿದ್ಯಾಲಯದ ಪದವಿಗಳ ಫಲಿತಾಂಶ, ರ್ಯಾಂಕ್ ಘೋಷಣೆ ಹಾಗೂ ಅಂಕಪಟ್ಟಿ ವಿತರಣೆ ವ್ಯವಸ್ಥೆ ಅರಂಭಿಸಲಾಗಿದೆ.
ಅಂಕಗಳನ್ನು ಗ್ರೇಡ್ ವ್ಯವಸ್ಥೆಗೆ ಪರಿವರ್ತಿಸುವಲ್ಲಿ ತಂತ್ರಾಂಶದಲ್ಲಿ ಎದುರಾದ ತಾಂತ್ರಿಕ ತೊಂದರೆ ಸಮಸ್ಯೆಗೆ ಕಾರಣ ಎಂದು ವಿಶ್ವವಿದ್ಯಾಲಯದ ಮೂಲಗಳು ಹೇಳುತ್ತವೆ. ತ್ವರಿತವಾಗಿ ಫಲಿತಾಂಶ ನೀಡಬೇಕೆಂಬ ಮನವಿಗೂ ಸ್ಪಂದಿಸಿಲ್ಲ. ಜೊತೆಗೆ ಕೆಲವು ಕಾಲೇಜುಗಳ ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ಹಾಕಲು ಮಾಡಿದ ವಿಳಂಬ ಹಾಗೂ ತಪ್ಪುಗಳೂ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಯುಯುಸಿಎಂಎಸ್ ವ್ಯವಸ್ಥೆಯಿಂದ ಬರೀ ಬಿ.ಇಡಿ ಕೋರ್ಸ್ನ ಪರೀಕ್ಷೆ ಫಲಿತಾಂಶಕ್ಕೆ ತೊಂದರೆ ಆಗಿಲ್ಲ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಹಿಂದೆ ಪರೀಕ್ಷೆ ಬರೆದವರ ಫಲಿತಾಂಶವೂ ಈಚೆಗೆ ಪ್ರಕಟವಾಗಿದೆ. ಅದಕ್ಕೂ ವಿ.ವಿ. ಪರೀಕ್ಷಾಂಗ ವಿಭಾಗದಿಂದ ಸತತ ಒತ್ತಡ ಹಾಕಿ ಕೆಲಸ ಮಾಡಿಸಿಕೊಳ್ಳಲಾಗಿದೆ.
‘ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿ ಸಂಘಟನೆಯವರು ಫಲಿತಾಂಶ ಕೇಳಿಕೊಂಡು ನಮ್ಮ ಬಳಿ ಬರುತ್ತಿದ್ದಾರೆ. ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ. ಯುಯುಸಿಎಂಎಸ್ ವಿಭಾಗಕ್ಕೆ ಕರೆ ಮಾಡಿದರೆ ಅಲ್ಲಿ ಯಾರೂ ಸ್ವೀಕರಿಸುವುದಿಲ್ಲ. ಕುವೆಂಪು ವಿಶ್ವವಿದ್ಯಾಲಯ ಮಾತ್ರವಲ್ಲ ರಾಜ್ಯದ ಎಲ್ಲ ವಿ.ವಿಗಳ ಬಿ.ಇಡಿ ವಿದ್ಯಾರ್ಥಿಗಳಿಗೂ ಇದೇ ತೊಂದರೆ ಆಗಿದೆ’ ಎಂದು ಕುವೆಂಪು ವಿ.ವಿ ಪರೀಕ್ಷಾಂಗ ವಿಭಾಗದ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
Source = ಪ್ರಜಾವಾಣಿ ದಿನಪತ್ರಿಕೆ
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್