ಅಮ್ಮನಘಟ್ಟವನ್ನು ಪ್ರೇಕ್ಷಣಿಯ ಮಾದರಿ ಯಾತ್ರಾ ಸ್ಥಳವನ್ನಾಗಿಸುವ ಸಂಕಲ್ಪ ನನ್ನದಾಗಿತ್ತು : ಹರತಾಳು ಹಾಲಪ್ಪ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯದೇವಸ್ಥಾನವನ್ನು ರಾಜ್ಯದಲ್ಲಿ ಆತ್ಯುತ್ತಮ ಮಾದರಿ ಪ್ರೇಕ್ಷಣಿಯ ಯಾತ್ರಾ ಕ್ಷೇತ್ರವನ್ನಾಗಿಸುವ ಮಹಾದಾಸೆ ಹೊಂದಿದ್ದೆ ಈ ಹಿಂದಿನ ಅವಧಿಯಲ್ಲಿ ಈ ದೇವಸ್ಥಾನವನ್ನು ಶಿಲಾಮಯ ದೇವಸ್ಥಾನವನ್ನಾಗಿಸಲು ಸರ್ಕಾರದಿಂದ ೧.೫೦ ಕೋಟಿ ಆನುದಾನವನ್ನು ಬಿಡುಗಡೆ ಮಾಡಲಾಗಿದ್ದು ನನ್ನ ಅವಧಿಯಲ್ಲಿಯೇ ಪೂರ್ಣವಾಗಬೇಕಾಗಿತ್ತು ಆದರೆ ರಾಜಕೀಯ ವ್ಯತ್ಯಾಸದಿಂದಾಗಿ ಪೂರ್ಣವಾಗಿಲ್ಲ ಎಂದು ಮಾಜಿ ಮಂತ್ರಿ ಹರತಾಳು ಹಾಲಪ್ಪ ಹೇಳಿದರು.
ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನಕ್ಕೆ ನೂರಾರು ವರ್ಷದ ಇತಿಹಾಸವಿದೆ, ಲಕ್ಷಾಂತರ ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನವನ್ನು ಪಡೆದುಕೊಂಡು ಹೋಗುತ್ತಾರೆ, ಸಾವಿರಾರು ಜನರು ಒಳಿತನ್ನು ಕಂಡಿದ್ದಾರೆ,ಕಾಣುತ್ತಿದ್ದಾರೆ. ಈ ಒಂದು ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆಂಬ ಅಭಿಲಾಷೆಯನ್ನು ನಾನು ಹೊಂದಿದ್ದೆ. ದೇವರ ಮೇಲೆ ನಂಬಿಕೆ ಮತ್ತು ಧಾರ್ಮಿಕ ಆಚರಣೆಯು ಪ್ರತಿಯೊಬ್ಬರ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಾನು ಶಾಸಕನಾಗಿದ್ದು ನನ್ನ ಅಧಿಕಾರ ಅವಧಿಯಲ್ಲಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನವನ್ನು ಸಹ ನೀಡಿದ್ದೆ.ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸುವುದರೊಂದಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಈ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರದಿಂದ ಐದು ವರ್ಷದ ಅವಧಿಯಲ್ಲಿ ೧೦ ಕೋಟಿ ಅನುದಾನವನ್ನು ತರುವುದರೊಂದಿಗೆ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸುಮಾರು ೨೩ ಎಕರೆ ಜಾಗವಿದ್ದು. ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೊಂದಿಗೆ ರಾಜ್ಯದಲ್ಲಿ ಅತ್ಯುತ್ತಮ ಮಾದರಿ ಯಾತ್ರಾ ಸ್ಥಳವನ್ನಾಗಿಸುವ ಸಂಕಲ್ಪ ನನ್ನದಾಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಹರತಾಳು ಹಾಲಪ್ಪ ರವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಧರ್ಮದರ್ಶಿ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಬಿ.ಸ್ವಾಮಿರಾವ್, ಎಪಿಎಂಸಿ ಮಾಜಿ ನಿರ್ದೇಶಕ ಕಲ್ಯಾಣಪ್ಪಗೌಡ, ಪ್ರಧಾನ ಕಾರ್ಯದರ್ಶಿ ಸುದೀರ್ಭಟ್,ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಅಲವಳ್ಳಿ,ಮೆಣಸೆ ಆನಂದ್ ,
ಕೋಡೂರು ವಿಜೇಂದ್ರಭಟ್,ಹರೀಶ್ಗೌಡ,ಡಾಕಪ್ಪ ಬೆಳ್ಳೂರು,ರತ್ನಮ್ಮ,ತಿಮ್ಮಪ್ಪ,ಕೋಡೂರು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸದಸ್ಯ ಜಯಪ್ರಕಾಶಶೆಟ್ಟಿ,ಇನ್ನಿತರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.