ಭಾರತದಲ್ಲಿ ನೋಟ್ ಬ್ಯಾನ್ ಆದ ನಂತರ ಜನ ಡಿಜಿಟಲ್ ಹಣಕಾಸಿನ ವ್ಯವಹಾರದ ಕಡೆ ಮುಖ ಮಾಡಿದರು. ಇದರಿಂದ ಜೀವನ ಒಂದು ಮಟ್ಟಕ್ಕೆ ಸುಧಾರಿಸಿತು ಎನ್ನುವಾಗಲೇ ಡಿಜಿಟಲ್ ಮೋಸಗಳು ಹೆಚ್ಚುತ್ತಿದ್ದು, ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ನಂಬಿಸಿ ಓಟಿಪಿ ನಂಬರ್ ಪಡೆದ ವ್ಯಕ್ತಿಯೊಬ್ಬರಿಗೆ ಸೈಬರ್ ಕಳ್ಳರು 1.80 ಲಕ್ಷ ರೂ. ವಂಚಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಚೌಡೇಶ್ವರಿ ಬೀದಿಯ ಸ್ವಾಮಿ (55) ವಂಚನೆಗೊಳಗಾದವರು.
ಏಪ್ರಿಲ್ 12 ರ ಬುಧವಾರ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಸ್ವಾಮಿ ಯವರ ಮೊಬೈಲ್ಗೆ ಕರೆ ಮಾಡಿದ ಅಪರಿಚಿತರು, ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡಬೇಕಿದ್ದು, ಕೆಲವು ಮಾಹಿತಿ ನೀಡಬೇಕೆಂದು ಹೇಳಿದ್ದಾರೆ.
ಅದರಂತೆ ಜಿ ಎಂ ಸ್ವಾಮಿ ಅಪರಿಚಿತರು ಕೇಳಿದ ಮಾಹಿತಿ ನೀಡಿದ್ದಾರೆ ನಂತರ ನಿಮ್ಮ ಮೊಬೈಲ್ಗೆ ಬಂದಿರುವ ಓಟಿಪಿ ನಂಬರ್ ಹೇಳುವಂತೆ ಸೂಚಿಸಿದ್ದರು. ಸ್ವಾಮಿ ನಾಲ್ಕೈದು ಬಾರಿ ಓಟಿಪಿ ನಂಬರ್ ಹೇಳಿದ್ದರು.
ಅಷ್ಟರಲ್ಲಾಗಲೇ ಸ್ವಾಮಿ ರವರ ಖಾತೆಯಿಂದ ವಂಚಕನ ಖಾತೆಗೆ ಕ್ರಮವಾಗಿ 98.500 , 50000 ಮತ್ತು 32600 ರೂ ವರ್ಗಾವಣೆ ಆಗಿದೆ.
ಇದ್ಯಾವುದರ ಅರಿವೇ ಇಲ್ಲದ ಜಿ ಎಂ ಸ್ವಾಮಿ ಕೆಲ ಸಮಯದ ನಂತರ ಮೊಬೈಲ್ ಮೆಸೇಜ್ ನ್ನು ಗಮನಿಸಿದಾಗ ತನ್ನ ಖಾತೆಯಿಂದ ಹಣ ವರ್ಗಾವಣೆಯಾಗಿ ಮೋಸ ಹೋಗಿರುವ ಮಾಹಿತಿ ತಿಳಿದುಬಂದಿದೆ.
ಅಮಾಯಕ ಕೂಲಿ ಕಾರ್ಮಿಕರಾದ ಜಿ ಎಂ ಸ್ವಾಮಿ ಸೈಬರ್ ಕಳ್ಳರ ಕೈಚಳಕದಿಂದ ಮನೆ ಮಾರಿ ಹೊಂದಿಸಿಟ್ಟಿದ್ದ ಲಕ್ಷಾಂತರ ರೂ ವನ್ನು ಕಳೆದುಕೊಂಡಿದ್ದಾರೆ.
ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.