Breaking
14 Jan 2026, Wed

ಬೇಳೂರು ಅಲೆಮಾರಿ ರಾಜಕಾರಣ ಬಿಟ್ಟು ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲಿ : ವೀರೇಶ್ ಆಲುವಳ್ಳಿ ವಾಗ್ದಾಳಿ

ಹೊಸನಗರ: ನೀವು ಇನ್ನೂ ಮುಂದೆಯು ರಾಜಕೀಯ ಅಲೆಮಾರಿಯಾಗೆ ಇರ್ತಿರಿ, ಮೊದಲು ನಿಮ್ಮ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಕಿಡಿಕಾರಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿಂದು ಪತ್ರಿಕಾಗೋಷ್ಠಿಯಲ‌್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಇದುವರೆಗೂ ಬಿ ಫಾರಂ ಸಿಗದೆ ಹತಾಶರಾಗಿರುವ ಗೋಪಾಲಕೃಷ್ಣ ಬೇಳೂರು ರವರು ಶಾಸಕ ಹರತಾಳು ಹಾಲಪ್ಪ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಏಕವಚನದಲಲ್ಲದೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಂಗಾರಪ್ಪವರು ಬಿಜೆಪಿಗೆ ಬಂದ ಕಾರಣ ಬಿಜೆಪಿಯು ಆ ಸಂದರ್ಭದಲ್ಲಿ 79 ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹೇಳುವ ಇವರಿಗೆ ರಾಜಕೀಯವಾಗಿ ಶಾಸಕರಾಗಿ ಮಾಡಿದ್ದು ಬಂಗಾರಪ್ಪನವರು ಹಾಗೂ ನಮ್ಮ ಬಿಜೆಪಿ ಪಕ್ಷ. ಅದೇ ಬಂಗಾರಪ್ಪನವರಿಗೆ ಬೇಳೂರು ಆ ಸಂದರ್ಭದಲ್ಲಿ ರಾಜಕೀಯವಾಗಿ ಅವರ ಬೆನ್ನಿಗೆ ನಿಲ್ಲದೆ ದ್ರೋಹ ಮಾಡಿದರು.

ಬೇಳೂರಿಗೆ ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗೂ ಬಿ ಫಾರಂ ದೊರೆತಿಲ್ಲ. ಮುಂದೆಯು ದೊರೆಯುವುದಿಲ್ಲ‌ವೆಂದು ಭವಿಷ್ಯ ನುಡಿದ ವೀರೇಶ್, ಹಿಂದುಳಿದ ವರ್ಗದ ನಾಯಕರಾದ ಬಂಗಾರಪ್ಪನವರು ಬಿಜೆಪಿಗೆ ಬಂದಾಗಲು ಅವರೊಂದಿಗೆ ನಿಷ್ಟೆಯಿಂದ ಇರಲಿಲ್ಲ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೂ ಸಹ ಅಪಹಾಸ್ಯದ ರೂಪದಲ್ಲಿ ಮಾತನಾಡಿದ್ದಾರಲ್ಲದೇ ಅವರಿಗೂ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ.

ಬಿ.ಎಸ್ ಯಡಿಯೂರಪ್ಪರವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ರಾಜ್ಯದ ಜನತೆಯ ಸೇವೆ ಮಾಡಿದ ಭಾಗ್ಯ ಇಷ್ಟು ದಿನ ದೊರೆಯಿತಲ್ಲಾ ಎಂದು ಸಂತೋಷದಿಂದ ಕಣ್ಣೀರು ಹಾಕಿದ್ದಾರೆ ಹೊರತು ಬೇರೆ ಯಾವ ಉದ್ದೇಶಕ್ಕೂ ಅಲ್ಲ. ಈಗಾಗಲೇ ಬೇಳೂರು ರವರು ಯಡಿಯೂರಪ್ಪರವರ ನಂಬಿಕೆಗೆ ದ್ರೋಹ ಬಗೆದು ಅವರ ಕಣ್ಣೀರಿನ ಶಾಪದಿಂದ ಕಳೆದ 10 ವರ್ಷದಿಂದ ಹತಾಷರಾಗಿ ಕುಳಿತ್ತಿದ್ದಾರೆ ಎಂದು ಆಲವಳ್ಳಿ ಟೀಕಿಸಿದರು.

ಬಿಜೆಪಿಯಲ್ಲಿ ಜಿಲ್ಲೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಹಾಲಪ್ಪ ಈ ರೀತಿ ಅಪ್ಪಾ ಎನ್ನುವವರಿಗೆ ಮುಂದಿನ ದಿನಗಳಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಹೇಳುವ ಇವರಿಗೆ, ಸಾಗರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರ ಪುತ್ರಿ ರಾಜನಂದಿನಿ ಹೆಸರು ಮೊದಲ ಪಟ್ಟಿಯಲ್ಲಿದೆ. ಅಲ್ಲದೆ ಈಗಾಗಲೇ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ 35 ವರ್ಷಕ್ಕೂ ಅಧಿಕವಾಗಿ ದುಡಿದ ಕಲಗೋಡು ರತ್ನಾಕರ್, ಬಿ.ಆರ್.ಜಯಂತ್, ಮಾಜಿ ಸಂಸದ ಕೆ.ಜಿ.ಶಿವಪ್ಪ ರವರ ಪುತ್ರ ಪ್ರಶಾಂತ್ ಹೆಸರು ಸಹ ಪಟ್ಟಿಯಲ್ಲಿದ್ದು, ಅಲ್ಲದೇ ವೀರಶೈವ ಜನಾಂಗಕ್ಕೆ ಟಿಕೆಟ್ ನೀಡುವುದಾದರೆ ಮಲ್ಲಿಕಾರ್ಜುನ್ ರವರು ಸಹಾ ಇದ್ದಾರೆ. ಹೀಗೆ 7 ಜನಕ್ಕೂ ಹೆಚ್ಚು ನಿಷ್ಠಾವಂತ ಕಾರ್ಯಕರ್ತರಿದ್ದು ಗೋಪಾಲಕೃಷ್ಣ ಬೇಳೂರು ರವರಿಗೆ ಟಿಕೆಟ್ ಸಿಗುವುದೇ ಸಂಶಯವಾಗಿದೆ.

ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿಯಂತಹ ಉನ್ನತ ಹುದ್ದೆ ಅಲಂಕರಿಸಿದ್ದಾರಲ್ಲದೇ ಕೆ.ಎಸ್.ಈಶ್ವರಪ್ಪ ಉಪಮುಖ್ಯಮಂತ್ರಿ ಮತ್ತು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಹರತಾಳು ಹಾಲಪ್ಪರವರು ಸಚಿವ ಸ್ಥಾನವನ್ನು ಅಲಂಕರಿಸಿ ಈಗ ಶಾಸಕರಾಗಿದ್ದಾರೆ. ಇಂತವರ ಬಗ್ಗೆ ಏಕವಚನದಲ್ಲಿ ಅಲ್ಲದೇ ಅಸಭ್ಯವಾಗಿ ಮಾತನಾಡುವುತ್ತಿರುವುದು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ರಾಜಕೀಯ ಅಲೆಮಾರಿಯಂತೆ ಅಲೆದಾಡುತ್ತಿರುವ ಇವರು ಬೇರೊಬ್ಬರ ಬಗ್ಗೆ ವೃತಃ ಆರೋಪ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಮಾತನಾಡಿ, ಹರತಾಳು ಹಾಲಪ್ಪರವರು ಕಾರ್ಯಕರ್ತರೊಂದಿಗೆ ಮಾತನಾಡುತ್ತಿರುವಾಗ ಜನತಾ ನ್ಯಾಯಾಲಯದಲ್ಲಿ ಗೆದ್ದಿದ್ದೇನೆ, ದೇವರ ನ್ಯಾಯಾಲಯದಲ್ಲಿ ಗೆದ್ದಿದ್ದೇನೆ ಹಾಗೂ ಎಲ್ಲಾ ಕಾರ್ಯಕರ್ತರ ಮನಸ್ಸನ್ನು ಗೆದ್ದಿದ್ದೇನೆ ಹೀಗಿರುವಾಗ ಯಾರೋ ಒಬ್ಬ ವ್ಯಕ್ತಿ ಇಲ್ಲಸಲ್ಲದ ಆರೋಪ ಮಾಡುತ್ತಾರೆಂದರೆ ಅದಕ್ಕೆ ಕಿಗೊಡುವುದು ಬೇಡಾ ಏನಿದ್ದರೂ ಕ್ಷೇತ್ರದ ಜನತೆಯ ಪ್ರೀತಿ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸೋಣ ಎಂದು ಹೇಳುವ ಶಾಸಕರು, ಅಭಿವೃದ್ಧಿಯತ್ತ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನಾಗೋಡಿ ಸೇತುವೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಈಗಾಗಲೇ 42 ಲಕ್ಷದಿಂದ ಆರಂಭಗೊಂಡ ಈ ಸೇತುವೆಯ ಅಭಿವೃದ್ಧಿಗೆ ಈಗ 4.25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಆದರೂ ಸೇತುವೆ ಕುಸಿತವಾಗುತ್ತಿರುವುದಕ್ಕೆ ಕಾರಣವೇನು ? ಎಂದು ಪ್ರಶ್ನಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ ಮಾಜಿ ಅಧ್ಯಕ್ಷ ವೀರೇಶ್, ಗೋಡೆ ನಿರ್ಮಾಣದ ಹಂತದಲ್ಲಿ ಅತೀ ಹೆಚ್ಚು ಮಣ್ಣು ಹಾಕಿರುವುದರಿಂದ ಅಲ್ಲದೇ ಅತೀ ಹೆಚ್ಚು ಮಳೆಯಾದ ಕಾರಣ ಗೋಡೆ ಕುಸಿತ ಕಂಡಿದೆ ಇದನ್ನು ಕೂಡಲೇ ಸರಿಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಬಿಳಕೋಡು ಗಣಪತಿ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಪಾಟೀಲ್, ನಿತೀಶ್, ಮಂಡಾನಿ ಮೋಹನ್, ಬಸವರಾಜ್, ಮಹಾಬಲ ಗೌಡ್ರು, ರಾಜೇಶ್ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *