ಹೊಸನಗರ: ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇನ್ನೊಬ್ಬರ ಶವದ ಮೇಲೆ ಸೌಧ ಕಟ್ಟಲು ಹೊರಟಿದೆ ಎಂದು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ್ ದಾಸ್ ಹೊಸಮನೆ ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರದ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿರುವ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಹಿಂದುತ್ವದ ಹೆಸರಲ್ಲೇ ಅಧಿಕಾರಕ್ಕೆ ಬಂದ ರಾಜ್ಯ ಹಾಗೂ ಕೇಂದ್ರ ಬಿಜೆಪಿಯ ನಾಯಕರೇ ನೀವು ಅಧಿಕಾರಕ್ಕೆ ಬಂದ ನಂತರ ದೇಶದ, ರಾಜ್ಯದ ಜನತೆ ಮನೆಯಿಂದ ಹೊರಗೆ ಬರಲು ಭಯಭೀತರಾಗುವ ವಾತಾವರಣ ನಿರ್ಮಾಣವಾಗಿದೆ. ನೀವು ಅಧಿಕಾರಕ್ಕೆ ಬಂದಾಗಿನಿಂದ ಈಗಾಗಲೇ ಅತಿ ಹೆಚ್ಚು ಹಿಂದೂ ಯುವಕರು, ಕಾರ್ಯಕರ್ತರು ದುರ್ಮರಣಕ್ಕೆ ತುತ್ತಾಗಿದ್ದಾರೆ. ಇನ್ನೂ ಎಷ್ಟು ಜನರನ್ನು ಬಲಿ ಕೊಡುವವರಿದ್ದೀರಿ? ನಿಮ್ಮ ಪಕ್ಷಕ್ಕಾಗಿ ದುಡಿದು ಹತ್ಯೆಯಾದ ಪ್ರವೀಣ್ ಅವರ ಅಂತಿಮಯಾತ್ರೆಗೆ ಹೋಗಿದ್ದಿರಾ? ಇನ್ನೊಬ್ಬರ ಶವದ ಮೇಲೆ ಸೌಧ ಕಟ್ಟಲು ನಾಚಿಕೆ ಆಗಲ್ವೆ? ಎಂದು ಪ್ರಶ್ನಿಸಿದರು.
ನಿಮ್ಮದು ಅಧಿಕಾರದ ಮತ್ತು ಹಣ ದಾಹ ಮಾತ್ರವೆ ಆಗಿದೆ. ಒಂದು ಕಡೆ ಮುಸ್ಲಿಂ ಯುವಕನ ಹತ್ಯೆ, ಇನ್ನೊಂದು ಕಡೆ ಹಿಂದೂ ಯುವಕನ ಹತ್ಯೆ ವಿದ್ಯಾವಂತ ಹಾಗೂ ನಿಷ್ಠಾವಂತ ಯುವಕರ ಪ್ರಾಣದ ಜೊತೆ ಚೆಲ್ಲಾಟವಾಡದೆ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಿ. ನಿಮ್ಮ ರಾಜಕೀಯ ಚಪಲಕ್ಕೆ ವಿದ್ಯಾರ್ಥಿಗಳು ಧರ್ಮ ರಕ್ಷಕರು ನಿಷ್ಠಾವಂತ ಕಾರ್ಯಕರ್ತರು ಪ್ರಾಣ ಕಳೆದುಕೊಳ್ಳಬೇಕು. ಪ್ರೀತಿಯಿಂದ ಸಾಕಿದ ಕೋಳಿ, ಕುರಿ ಪ್ರಾಣವನ್ನು ತೆಗೆಯುವಾಗ ನೂರು ಬಾರಿ ಯೋಚಿಸುವ ಸಮಯದಲ್ಲಿ, ಬೀದಿ ಬೀದಿಗಳಲ್ಲಿ ತಿಂಗಳಿಗೆ ಎರಡು ಮೂರು ಜನರಂತೆ ಒಂದೊಂದು ಧರ್ಮ ಒಂದೊಂದು ಜಾತಿಯ ಅಮಾಯಕ ಜೀವಗಳು ಬಲಿಯಾಗುತ್ತಿದ್ದಾವೆ ನಿಮಗೆ ನಾಚಿಕೆ ಆಗುತ್ತಿಲ್ಲವೇ ? ಧರ್ಮದ ಹೆಸರಿನಲ್ಲಿ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವ ನೀವು ನಿಜವಾದ ಜನ ಸೇವಕರೇ ? ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಒಬ್ಬ ಸಂಸದರು ಹೇಳುತ್ತಾರೆ ಕಾಂಗ್ರೆಸ್ ಪಕ್ಷದವರು ಅಧಿಕಾರದಲ್ಲಿದ್ದರೆ ನಾವು ಕಲ್ಲುತೂರಾಡಬಹುದಾಗಿತ್ತು. ಇದು ನಿಮ್ಮ ಪಕ್ಷದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಹೀಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವ ಪ್ರವೃತ್ತಿ ನಿಮ್ಮದಾಗಿದೆ. ಈಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವೇ ಇರುವುದು ನಾವು ಈ ಬಗ್ಗೆ ಸ್ವಲ್ಪ ಸಂಭಾಳಿಸಿಕೊಂಡು ಹೋಗೋಣ ಎನ್ನುವ ಮಾತನ್ನು ಹೇಳುತ್ತಿದ್ದೀರಿ ಇದು ಖಂಡನೀಯವಾಗಿದೆ.
ಎಲ್ಲರ ಜೀವವು ಜೀವವೇ ನಿಮ್ಮ ರಾಜಕೀಯಕ್ಕಾಗಿ ಬಡವರ ಪ್ರಾಣ ಹಾಗೂ ಮಾನವನ್ನು ಕಳೆಯಬೇಡಿ ಎಂದು ಚೇತನ್ ದಾಸ್ ಹೊಸಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ ರವಿ, ನಂದೀಶ್, ಪಕ್ಷದ ಕಾರ್ಯಕರ್ತರಾದ ಜಗದೀಶ್ ಇದ್ದರು.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್