ಹೊಸನಗರ : ಮಾನಸಿಕ ಅಸ್ವಸ್ಥ ಮಗನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವೃದ್ದ ಮಹಿಳೆಯೊಬ್ಬರಿಗೆ ಪ್ರಭಾವಿ ಖಾಸಗಿ ವ್ಯಕ್ತಿಯೊಬ್ಬ ಬೆದರಿಸಿ ಅವರ ಆಸ್ತಿ ಕಬಳಿಸಿ ಮನೆಯಿಂದ ಹೊರದಬ್ಬಿರುವ ಘಟನೆ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದಿದೆ.
ಬ್ರಹ್ಮೇಶ್ವರ ಗ್ರಾಮದ ಶಾರದಮ್ಮ ಎಂಬ 65 ರ ವೃದ್ದೆ 30 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದು, ಮೊದಲನೆ ಮಗ ವೀರಪ್ಪ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ.ಮಾನಸಿಕ ಅಸ್ವಸ್ಥನಾಗಿರುವ ಎರಡನೇ ಮಗ ಜಗದೀಶ್ ಜೊತೆ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ.
ಬ್ರಹ್ಮೇಶ್ವರದ ವೃದ್ದೆಯ ಮನೆಯ ಬಳಿ ಇರುವ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರು ವೃದ್ದೆಯನ್ನು ಬೆದರಿಸಿ,ಮೋಸ ಮಾಡಿ ಲಕ್ಷಾಂತರ ಮೌಲ್ಯದ ಇವರ ಮನೆ ಹಾಗೂ ಜಾಗವನ್ನು ಮೂರು ಕಾಸಿಗೆ ವ್ಯಾಪಾರ ಮಾಡಿ ಅದರಲ್ಲೂ ಸ್ವಲ್ಪ ಹಣ ನೀಡಿ ಈ ಅಸಹಾಯಕ ವೃದ್ದೆ ಹಾಗೂ ಮಾನಸಿಕ ಅಸ್ವಸ್ಥ ಮಗನನ್ನು ಮನೆಯಿಂದ ಹೊರಹಾಕಿ,ಹೊಸನಗರ ಬಸ್ ನಿಲ್ದಾಣಕ್ಕೆ ಕರೆತಂದು ಬಿಟ್ಟು ಹೋಗಿದ್ದು ಈ ಸಂಬಂಧ ವೃದ್ದೆ ಶಾರದಾ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಇಳಿ ವಯಸ್ಸಿನಲ್ಲಿ ವೃದ್ದೆ ಶಾರದಾ ತನ್ನ ಮಾನಸಿಕ ಅಸ್ವಸ್ಥ ಮಗನ ಜೊತೆ ಹೊಸನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆ ಹಣವನ್ನು ಕೂಲಿ ಮಾಡಿ ಕಟ್ಟುತ್ತಿದ್ದಾರೆ.ಹಾಗೂ ಮಗ ಜಗದೀಶ್ ಮಾನಸಿಕ ಅಸ್ವಸ್ಥನಾಗಿರುವುದರಿಂದ ಅವನ ಚಿಕಿತ್ಸೆ ವೆಚ್ಚವನ್ನು ಸಹ ಕೂಲಿ ಹಣದಿಂದಲೇ ಭರಿಸುತ್ತಿದ್ದು ವೃದ್ದೆಗೆ ವಯಸ್ಸಾಗಿದ್ದರಿಂದ ಹಾಗೂ ಆರೋಗ್ಯ ಸರಿಯಿಲ್ಲದೇ ಇರುವುದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿರುವ ಕಾರಣ ವೃದ್ದೆ ಪೊಲೀಸರ ಬಳಿ ನ್ಯಾಯಕ್ಕಾಗಿ ಅಂಗಲಾಚುತಿದ್ದಾರೆ.
ಅವರು ಕೊಟ್ಟಿರುವ ಅಲ್ಪ ಸ್ವಲ್ಪ ಹಣ ಹೇಗಾದರೂ ಮಾಡಿ ಹಿಂದಿರುಗಿಸುತ್ತೇನೆ ನಾನು ನನ್ನ ಮಗ ವಾಸಿಸಲು ನಮ್ಮ ಸ್ವಂತ ಮನೆಯನ್ನು ಬಿಡಿಸಿಕೊಡಿ ಎಂದು ಕಣ್ಣಿರು ಹಾಕಿ ಅಂಗಲಾಚುವಾಗ ಎಂತಹ ಕಲ್ಲು ಮನಸ್ಸಿನವರಿಗೂ ಎದೆ ಚುರುಕ್ ಅನ್ನಿಸದೇ ಇರದು.
ಕೂಡಲೇ ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸಿ ಅಸ್ವಸ್ಥ ಮಗನೊಂದಿಗೆ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ 65 ವರ್ಷದ ವೃದ್ದೆ ಶಾರದಾ ರವರಿಗೆ ನ್ಯಾಯ ಕೊಡಿಸಬೇಕಾಗಿದೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್