A nationalised bank’s assistant manager was arrested after allegedly stealing customers’ pledged gold worth nearly ₹4 crore to repay debts incurred through online gaming and casino betting. Police recovered over 1 kg of gold; investigation continues.
ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ಹಾಗೂ ಕ್ಯಾಸಿನೋ ಜೂಜಾಟದ ಚಟಕ್ಕೆ ಬಿದ್ದು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರಾಷ್ಟ್ರೀಕೃತ ಬ್ಯಾಂಕ್ನ ಸಹಾಯಕ ಮ್ಯಾನೇಜರ್ ಒಬ್ಬರು, ಗ್ರಾಹಕರು ಅಡಮಾನ ಇರಿಸಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಖಾಸಗಿ ಫೈನಾನ್ಸ್ಗಳಲ್ಲಿ ಅಡಮಾನ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಯಾರು?
ಬಂಧಿತ ಆರೋಪಿ ಕಿರಣ್ ಕುಮಾರ್ (35). ಆಂಧ್ರಪ್ರದೇಶದ ಚಿತ್ತೂರು ಮೂಲದವನಾದ ಕಿರಣ್, ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಯಾಗಿದ್ದು, ಗಿರಿನಗರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸಹಾಯಕ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಆರು ತಿಂಗಳಲ್ಲಿ ಹಂತ ಹಂತವಾಗಿ ಕಳವು :
ಪೊಲೀಸರ ಮಾಹಿತಿ ಪ್ರಕಾರ, ಕಿರಣ್ ಆನ್ಲೈನ್ ಗೇಮಿಂಗ್ ಹಾಗೂ ಕ್ಯಾಸಿನೋಗಳಲ್ಲಿ ಹಣ ಹೂಡಿ ಭಾರಿ ನಷ್ಟ ಅನುಭವಿಸಿದ್ದ. ಸಾಲದ ಭಾರ ತಾಳಲಾರದೆ, ಬ್ಯಾಂಕ್ನ ಲಾಕರ್ನಲ್ಲಿ ಗ್ರಾಹಕರು ಅಡಮಾನ ಇರಿಸಿದ್ದ ಚಿನ್ನಾಭರಣಗಳನ್ನು ಕಳೆದ ಆರು ತಿಂಗಳಿನಿಂದ ಹಂತ-ಹಂತವಾಗಿ ಕದ್ದಿದ್ದಾನೆ. ಒಟ್ಟು 2 ಕೆಜಿ 780 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದು, ಅದರ ಅಂದಾಜು ಮೌಲ್ಯ ಸುಮಾರು 4 ಕೋಟಿ ರೂ. ಆಗಿದೆ.
ಫೈನಾನ್ಸ್ಗಳಲ್ಲಿ ಅಡಮಾನ, ಮತ್ತೆ ಜೂಜಾಟ :
ಕದ್ದ ಚಿನ್ನವನ್ನು ಕತ್ರಿಗುಪ್ಪೆ ಪ್ರದೇಶದ ಎರಡು ಖಾಸಗಿ ಫೈನಾನ್ಸ್ಗಳಲ್ಲಿ ಅಡಮಾನ ಇಟ್ಟು ಹಣ ಪಡೆದಿದ್ದ ಆರೋಪಿ, ಅದರ ಒಂದು ಭಾಗದಿಂದ ಸಾಲ ತೀರಿಸಿದ್ದರೂ, ಉಳಿದ ಹಣವನ್ನು ಮತ್ತೆ ಗೇಮಿಂಗ್ಗೆ ಹೂಡಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ ಇದುವರೆಗೆ 1 ಕೆಜಿಗೂ ಅಧಿಕ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಗ್ರಾಹಕಿ ಬಂದಾಗಲೇ ಬಯಲು :
ಆರು ತಿಂಗಳ ಹಿಂದೆ ಚಿನ್ನ ಅಡವಿಟ್ಟು ಸಾಲ ಪಡೆದಿದ್ದ ಮಹಿಳೆಯೊಬ್ಬರು ಇತ್ತೀಚೆಗೆ ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳಲು ಬ್ಯಾಂಕ್ಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ಯಾಕೆಟ್ ಪರಿಶೀಲಿಸಿದಾಗ ಕೆಲವು ಆಭರಣಗಳು ನಾಪತ್ತೆಯಾಗಿದ್ದವು. ತಕ್ಷಣ ಅಧಿಕಾರಿಗಳು ಲಾಕರ್ ತಪಾಸಣೆ ನಡೆಸಿದಾಗ, ಕಳೆದ ಒಂದು ವರ್ಷದಲ್ಲಿ ಚಿನ್ನ ಸಾಲ ಮಂಜೂರು ಮಾಡಲಾಗಿದ್ದ 207 ಪ್ಯಾಕೆಟ್ಗಳ ಪೈಕಿ 21 ಪ್ಯಾಕೆಟ್ಗಳಲ್ಲಿ ಚಿನ್ನ ಕಾಣೆಯಾಗಿದ್ದು, ಮೂವತ್ತು ಪ್ಯಾಕೆಟ್ಗಳಲ್ಲಿ ಸಂಪೂರ್ಣ ಚಿನ್ನವೇ ನಾಪತ್ತೆಯಾಗಿರುವುದು ಪತ್ತೆಯಾಗಿದೆ.
ಆಂತರಿಕ ವಿಚಾರಣೆಯಲ್ಲಿ ಒಪ್ಪಿಗೆ :
ಬ್ಯಾಂಕ್ನ ಆಂತರಿಕ ವಿಚಾರಣೆಯಲ್ಲಿ ಆರೋಪಿ ಕಿರಣ್ ವಲಯ ಕಚೇರಿಗೆ ಹಾಜರಾಗಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಚಿನ್ನವನ್ನು ಖಾಸಗಿ ಫೈನಾನ್ಸ್ಗಳಲ್ಲಿ ಅಡಮಾನ ಇಟ್ಟಿರುವುದನ್ನೂ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ವಲಯ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧನ ಮಾಡಿದ್ದಾರೆ.
ಡಿಸಿಪಿ ಹೇಳಿಕೆ :
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಮಾತನಾಡಿ, “ಬ್ಯಾಂಕ್ನಿಂದ ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಸಹಾಯಕ ಮ್ಯಾನೇಜರ್ನ್ನು ಬಂಧಿಸಲಾಗಿದೆ. ಕದ್ದ ಹಣವನ್ನು ಆನ್ಲೈನ್ ಬೆಟ್ಟಿಂಗ್ಗೆ ಬಳಸಿರುವುದು ತನಿಖೆಯಿಂದ ಮೇಲ್ನೋಟಕ್ಕೆ ಗೊತ್ತಾಗಿದೆ. ಅಡಮಾನ ಇಟ್ಟಿರುವ ಫೈನಾನ್ಸ್ಗಳು ಚಿನ್ನವನ್ನು ಪೊಲೀಸರಿಗೆ ಒಪ್ಪಿಸಲು ಹಿಂದೇಟು ಹಾಕುತ್ತಿದ್ದು, ಈ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗಿದೆ” ಎಂದರು.
ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.
ಬೈಕ್ ಸವಾರನ ಮೇಲೆ ಮುಸಿಯ ದಾಳಿ; ಗಂಭೀರ ಗಾಯ A bike rider was seriously injured after a…
ಹೊಸನಗರ ತಾಲೂಕಿನ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ | ಶಿಕ್ಷಣ ಸಚಿವರಿಂದ ಅಭಿನಂದನೆ Rural teacher Ratnakumari…
ಬೇಟೆಗೆ ಹೊರಟಿದ್ದ ನಾಲ್ವರ ಬಂಧನ; ಎರಡು ನಾಡ ಬಂದೂಕು ಸೇರಿ ಹಲವು ವಸ್ತು ವಶಕ್ಕೆ ! Four people were…
ಪ್ರವಾಸಿ ಬಸ್ ಪಲ್ಟಿ: ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಮಂದಿಗೆ ಗಾಯ nursing students died and 20…
ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ತೀರ್ಥಹಳ್ಳಿಯಲ್ಲಿ ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ 55-year-old Bengaluru-based civil contractor Anil…
ಕರ್ತವ್ಯ ನಿರತ ಅರಣ್ಯ ವಾಚರ್ ಮೇಲೆ ಕರಡಿ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರಣ್ಯಾಧಿಕಾರಿಗಳು Forest department…